ಡಾಕ್ಟರ್ ವಿಷ್ಣುವರ್ಧನ್(Vishnuvardhan) ಅವರು ಕನ್ನಡ ಚಿತ್ರರಂಗಕ್ಕೆ ದೊರೆತ ಸಂಪತ್ತು ಎಂದರೆ ತಪ್ಪಾಗಲಾರದು. ಸಂಪತ್ ಕುಮಾರ ಎಂಬ ಹೆಸರಿನ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ‘ವಂಶವೃಕ್ಷ’ದ ಮೂಲಕ ಕನ್ನಡ ಚಿತ್ರರಂಗದಲ್ಲಿ ಚೊಚ್ಚಲ ಹೆಜ್ಜೆ ಇಟ್ಟು, ಪುಟ್ಟಣ್ಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ವಿಷ್ಣುವರ್ಧನ್ ಎಂದೇ ಜನಪ್ರಿಯಗೊಂಡರು.
ದಕ್ಷಿಣ ಭಾರತದ ಫಿಲಂ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿರುವ ಡಾಕ್ಟರ್ ವಿಷ್ಣುವರ್ಧನ್, ಕರ್ನಾಟಕ ಜನತೆಯ ಅಚ್ಚಳಿಯದ ನಟರು. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಎಚ್.ಎಲ್.ನಾರಾಯಣ ರಾವ್ ಮತ್ತು ಕಾಮಾಕ್ಷಮ್ಮ ದಂಪತಿಗೆ ಜನಿಸಿದರು.
ಅವರ ತಂದೆ ಸಂಗೀತ ಸಂಯೋಜಕರು, ಚಿತ್ರಕಥೆಗಾರರು ಆಗಿದ್ದರು. ವಿಷ್ಣುವರ್ಧನ್ ಅವರಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ತುಂಬಾ ಆಸಕ್ತಿ ಇತ್ತು. ಇವರ ಸಹೋದರಿಯು ಮೈಸೂರಿನ ಅರಮನೆಯಲ್ಲಿ ನೃತ್ಯಗಾರ್ತಿಯಾಗಿದ್ದು, ಕಲೆ ಎಂಬುದು ತಂದೆಯಿಂದಲೇ ಬಂದ ಬಳುವಳಿ ಎಂಬಂತಿತ್ತು.
ಕಳ್ಳ ಕುಳ್ಳ, ಭಾಗ್ಯ ಜ್ಯೋತಿ, ನಾಗರಹೊಳೆ, ಸಹೋದರರ ಸವಾಲ್, ಗಲಾಟೆ ಸಂಸಾರ, ಖೈದಿ, ಹುಲಿ ಹೆಜ್ಜೆ, ಮಕ್ಕಳ ಸೈನ್ಯ, ಕರ್ಣ, ಮುತ್ತಿನ ಹಾರ, ಹಾಲುಂಡ ತವರು, ಯಜಮಾನ, ಜೀವನದಿ, ಆಪ್ತಮಿತ್ರ, ಆಪ್ತರಕ್ಷಕ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹಿಂದಿ, ಮಲಿಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿಯೂ ಅಭಿನಯಿಸಿ ಬಹುಭಾಷಾ ಪ್ರತಿಭೆ ಎನಿಸಿಕೊಂಡವರು. 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆಗೆ ಪಾತ್ರರಾದ ಡಾಕ್ಟರ್ ವಿಷ್ಣುವರ್ಧನ್ ಅವರು ಪ್ರಖ್ಯಾತ ನಟಿ, ಭಾರತೀಯವರನ್ನು ವಿವಾಹವಾದರು.
ದಶಕಗಳು ಕಳೆದರೂ ಸಿನಿಪ್ರಿಯರು ಮರೆಯಲಿಚ್ಚಿಸದ ನಟ ಡಾ. ವಿಷ್ಣುವರ್ಧನ್ ಅವರ ಬಗ್ಗೆ ವಿದೇಶಿ ಪತ್ರಕರ್ತೆಯೊಬ್ಬಳು, ಭಾರತ ಕಂಡ ಅದ್ಬುತ ನಟರೆಂದು ವಿಷ್ಣುದಾದಾ ಅವರನ್ನು ಮೆಚ್ಚಿ ಬರೆದಿದ್ದಳು. ಕನ್ನಡ ಚಿತ್ರರಂಗದ Angry young man, ವಿಷ್ಣುವರ್ಧನ್ ಅವರ ಜೀವನ ಕಥೆಯನ್ನು ಹಾಡಿ ಹೊಗಳಿದ್ದಳು. ಬನಶಂಕರಿಯಿಂದ ಕೆಂಗೇರಿವರೆಗೆ ಸುಮಾರು 14 ಕಿಲೋ ಮೀಟರ್ ಉದ್ದದ ರಸ್ತೆಗೆ ಗೌರವಾರ್ಥವಾಗಿ ವಿಷ್ಣುವರ್ಧನ್ ಅವರ ಹೆಸರಿಟ್ಟಿರುವುದು, ‘ಭಾರತದ ನಟರ ಹೆಸರಲ್ಲಿರುವ ಅತಿ ಉದ್ದದ ರಸ್ತೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ ಎಂಬುದನ್ನು ಕೂಡ ಬರೆದಿದ್ದರು.