ಪುನೀತ್ ರಾಜಕುಮಾರ್ ಅವರು ಸಾವನ್ನಪ್ಪಿ ವರ್ಷವೇ ಕಳೆದರೂ ಕುಟುಂಬಸ್ಥರು, ಅಭಿಮಾನಿಗಳು, ಜೊತೆಗಾರರು, ಸಂಬಂಧಿಕರು ಸೇರಿದಂತೆ ಹಲವಾರು ಮಂದಿ ಕಂಬನಿ ಮಿಡಿಯುತ್ತಲೇ ಇದ್ದಾರೆ. ಹೊಸದೊಂದು ಚಿತ್ರೀಕರಣದಲ್ಲಿ ಪುನೀತ್ ರಾಜಕುಮಾರ್ ಅವರು ಬ್ಯುಸಿಯಾಗಿದ್ದಾರೆ ಎಂಬ ಭಾವವೇ ಹೊರತು ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ಇಂದಿಗೂ ಯಾರಿಗೂ ನಂಬಲಾಗುತ್ತಿಲ್ಲ. ಪುನೀತ್ ರಾಜಕುಮಾರ್ ಅವರ ನೆನಪುಗಳು ಕಾಡುತ್ತಲೇ ಇವೆ..
ಅಪ್ಪು, ಅರಸು, ಆಕಾಶ, ವಂಶಿ, ಅಭಿ, ಯಾರೇ ಕೂಗಾಡಲಿ, ಅಣ್ಣಾಬಾಂಡ್, ಯುವರತ್ನ, ಮೈತ್ರಿ, ಚಕ್ರವ್ಯೂಹ, ರಾಜಕುಮಾರ್ ಹೀಗೆ ಹಲವಾರು ಉತ್ತಮ ಚಿತ್ರಗಳಲ್ಲಿ ಕಥಾನಾಯಕನಾಗಿ ಮಿಂಚಿದ್ದು, ಅಭಿನಯಕ್ಕಾಗಿ ಎಲ್ಲರ ಹೊಗಳಿಕೆಗೆ ಪುನೀತ್ ಅವರು ಪಾತ್ರರಾಗಿದ್ದಾರೆ.
ನೃತ್ಯದ ವಿಚಾರವಾಗಿ ಬಂದರೆ ಯಾವ ರೀತಿಯಿಂದಾದರೂ ದೇಹವನ್ನು ಬಾಗಿಸಬಲ್ಲ ಫ್ಲೆಕ್ಸಿಬಿಲಿಟಿಯನ್ನು ಹೊಂದಿದ್ದರು. ಪುನೀತ್ ಅವರು ಹಾಡುವ ಚಿತ್ರಗೀತೆಗಳನ್ನು ಕೇಳಿದಾಗ ಅಪ್ಪಾಜಿಯವರ ಕಂಠದ ನೆನಪು ಮರುಕಳಿಸುತ್ತದೆ. ಕಡಿಮೆ ವಯಸ್ಸಿನಲ್ಲಿಯೇ ಅಪಾರ ಸಾಧನೆಗೈದ ಅಪ್ಪು ಅವರು ಕನ್ನಡ ಚಿತ್ರರಂಗದ ಹೆಮ್ಮೆಯಾಗಿದ್ದಾರೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಅಪ್ಪು ಅವರು ಅದೆಷ್ಟೋ ವೃದ್ಧರಿಗೆ, ಅನಾಥ ಮಕ್ಕಳಿಗೆ ಊಟೋಪಚಾರ, ಆಶ್ರಯವನ್ನು ನೀಡಿದ್ದಾರೆ. ಬಡ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ದೊರಕಿಸಿಕೊಟ್ಟಿದ್ದಾರೆ. ಚಿತ್ರರಂಗದ ಕಲಾವಿದರಿಗೆ ಮಾದರಿಯಾಗಿದ್ದಾರೆ. ಇವರು ಮಾಡಿದ ಸಹಾಯವನ್ನು ನೆನೆದು ಇವರನ್ನು ದೇವರಂತೆ ಕಾಣುವ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ.
ಅಭಿಮಾನಿ ದೇವರುಗಳೆಂದು ಪುನೀತ್ ಅವರು ಪ್ರೀತಿಯಿಂದ ಕರೆದರೆ, ಅವರ ಅಭಿಮಾನಿಗಳು ಪುನೀತ್ ಅವರನ್ನೇ ದೇವರೆನ್ನುತ್ತಾರೆ. ಸರಳತೆ, ಎಲ್ಲರೊಂದಿಗೆ ನಗುನಗುತ್ತ ಮಾತನಾಡುವ ಶೈಲಿ ಎಂತಹ ಮನುಷ್ಯನನ್ನಾದರೂ ಆಕರ್ಷಿಸುತ್ತದೆ. ಅಂತೆಯೇ ಸ್ಟಾರ್ ನಟರೊಬ್ಬರು ಇವರ ಫೋಟೋವನ್ನು ತಮ್ಮ ಮನೆಯಲ್ಲಿರಿಸಿಕೊಂಡು ದೇವರಂತೆ ಪೂಜಿಸುತ್ತಿದ್ದಾರೆ.
ತೆಲುಗು, ತಮಿಳು ಚಿತ್ರರಂಗದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡು, ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ, ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಅವರು ಪುನೀತ್ ರಾಜಕುಮಾರ್ ಅವರ ಅಭಿಮಾನಿ; ಪುನೀತ್ ಅವರ ಫೋಟೋವನ್ನು ತಮ್ಮ ಮನೆಯ ದೇವರ ಕೋಣೆಯಲ್ಲಿರಿಸಿಕೊಂಡಿದ್ದಾರೆ ಎಂಬುದು ಇತ್ತೀಚಿಗಷ್ಟೇ ತಿಳಿದು ಬಂದಿದೆ.