ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಲೇ ಸಿಹಿಸುದ್ದಿ ನೀಡಿದ ಮಯೂರಿ

9 ಹೊಸ ಮಂದಿ, 9 ಹಳೆ ಮಂದಿಯಿಂದ ಕೂಡಿದ ಬಿಗ್ ಬಾಸ್ ನ 9ನೇ ಸೀಸನ್ ಜೋರಾಗಿ ಸದ್ದು ಮಾಡುತ್ತಿದೆ. ಎಲ್ಲಾ ಸೀಸನ್ಗಳಂತೆ ಈ ಬಾರಿಯು ಹೊಸ ಹೊಸ ಟಾಸ್ಕ್ ಗಳನ್ನು ಸ್ಪರ್ಧಿಗಳಿಗಾಗಿ ಏರ್ಪಡಿಸಿ, ನೋಡುಗರ ಚಿತ್ತ ಅತ್ತ ಸರಿಯದಂತೆ ಬಿಗ್ ಬಾಸ್ ನ ಕಾರ್ಯ ನಡೆಯುತ್ತಿದೆ. ಸುಂದರ ಗೀತೆಯೊಂದಿಗೆ ಪ್ರಾರಂಭವಾಗುವ ಬೆಳಗಿನಜಾವವು ದಿನ ಕಳೆಯುತ್ತಾ ರಂಪಾಟಗಳ ಸುರಾಗಬಹುದು; ಇಲ್ಲವೇ ಮನರಂಜನೆಯಿಂದ ಕೂಡಿರಬಹುದು ಅಥವಾ ಸ್ಪರ್ಧಿಗಳ ಮರೆಯಲಾರದ ಘಟನೆಗಳ ನೆನಪಿಸುವ ಭಾವುಕ ಕ್ಷಣಗಳಿಂದ ತುಂಬಿರಬಹುದು.

ಬಿಗ್ ಬಾಸ್ ಮನೆಗೆ ‘ನಾನು ಅಷ್ಟಾಗಿ ಎಲ್ಲರೊಂದಿಗೆ ಬೆರೆಯುವುದಿಲ್ಲ’ ಎನ್ನುತ್ತಲೆ ಎಂಟ್ರಿ ಕೊಟ್ಟ ಮುದ್ದು ಮೊಗದ ತಾರೆ, ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿಯವರು ಬಿಗ್ ಬಾಸ್ ಮನೆಯ ಸದಸ್ಯರ ಪ್ರೀತಿ, ಸ್ನೇಹವನ್ನು ಗಳಿಸಿಯಾಗಿತ್ತು. ತನ್ನ ಒಂದುವರೆ ವರ್ಷದ ಮುದ್ದು ಕಂದಮ್ಮನನ್ನು ನೆನೆದು, ಟಾಸ್ಕ್ಗಳಲ್ಲಿ ಉಳಿದವರಷ್ಟು ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ಮಗುವನ್ನು ಕಾಣದೆ, ಅವನನ್ನು ನೋಡಲು ಆಸೆಯಾಗುತ್ತಿದೆ ಎಂದು ಆಗಾಗ ಅಳುತ್ತಿದ್ದರು.

ಈ ಬಾರಿಯ ಎಲಿಮಿನೇಷನ್ನಲ್ಲಿ ಕೊನೆಯದಾಗಿ ಉಳಿದವರು ಮಯೂರಿ ಮತ್ತು ನೇಹಾ. ಎರಡು ಬೈಕ್ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿತ್ತು. ಸ್ಪರ್ಧಿಗಳೆಲ್ಲ ಬಾಯ ಮೇಲೆ ಕೈ ಇಟ್ಟು ನೋಡುತ್ತಿದ್ದರು. ಒಂದು ಬೈಕಲ್ಲಿ ನೇಹಾ ಮತ್ತು ಇನ್ನೊಂದು ಬೈಕ್ ನಲ್ಲಿ ಮಯೂರಿಯವರು ಕುಳಿತರು. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯದಾಗಿ ಸೇಫ್ ಆದವರು ನೇಹಾ. ಸವಾರನೊಂದಿಗೆ ಬೈಕ್ ನಲ್ಲಿ ಕೂತು ಮಯೂರಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದರು.

ಮದುವೆಯ ನಂತರ ತೆರೆಯ ಮೇಲೆ ಅಷ್ಟಾಗಿ ಕಾಣಿಸಿಕೊಳ್ಳದ ಮಯೂರಿಯವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಲೇ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ‘ಆದ್ಯಂತ’ ಎಂಬ ಸಿನಿಮಾದಲ್ಲಿ ಮಯೂರಿಯವರು ನಾಯಕಿಯಾಗಿ ನಟಿಸಿದ್ದು, ಬಿಡುಗಡೆಯಾಗಲು ಸಿದ್ಧವಾಗಿ ನಿಂತಿದೆ. ಕೊಂಚ ಬ್ರೇಕ್ನ ಬಳಿಕ ತೆರೆಯೇರಲಿರುವ ಮಯೂರಿಯವರ ‘ಆದ್ಯಂತ’ ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಈ ಸುದ್ದಿ ತಿಳಿದ ಅಭಿಮಾನಿಗಳು ‘ಮತ್ತೊಮ್ಮೆ ಸಿನಿಮಾರಂಗಕ್ಕೆ ಕಾಲಿಟ್ಟ ನಿಮಗೆ ಸ್ವಾಗತ’ ಎಂದಿದ್ದಾರಂತೆ.

Leave a Comment

error: Content is protected !!