ಕಾಂತಾರ ಚಿತ್ರದಲ್ಲಿ ನಾಯಕನಾಗಿ ನಟಿಸಲು ಪುನೀತ್ ರಾಜಕುಮಾರ್ ಯಾಕೆ ಒಪ್ಪಿಲ್ಲ ಗೊತ್ತಾ?

ಲೇಖನಿಯನ್ನು ಕೈಯಲ್ಲಿ ಹಿಡಿದು, ಒಂದು ದಂತ ಕಥೆಯನ್ನು ತೆರೆಯ ಮೇಲೆ ತೋರಿಸುವ ಹಂಬಲವಿರಿಸಿಕೊಂಡು, ನೈಜತೆಗೆ ಹತ್ತಿರವಾದ ಸುಂದರ ಕಥೆಯನ್ನು ಬರೆದ ರಿಷಬ್ ಶೆಟ್ಟಿಯವರಿಗೆ ನಾಯಕನ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಸರಿಹೊಂದುತ್ತಾರೆ ಎನಿಸಿತ್ತಂತೆ. ಪುನೀತ್ ರಾಜಕುಮಾರ್ ಎಂದರೆ ‘ನಟಸಾರ್ವಭೌಮ’; ಕನ್ನಡಿಗರ ‘ಪವರ್’. ನಟನೆ, ನಡತೆ ಎರಡರ ಮೂಲಕವೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ ಇವರ ನೆನಪು, ಪ್ರತಿ ನಿರ್ದೇಶಕನಿಗೂ ಕಣ್ಮುಂದೆ ಬರುವುದರಲ್ಲಿ ಆಶ್ಚರ್ಯವೇನಿಲ್ಲ. ಅವರ ಸಾವು ಹೃದಯ ಹಿಂಡುವ ಸಂಗತಿ.

‘ಹಾಗಾದರೆ ಪುನೀತ್ ರಾಜಕುಮಾರ್ ಅವರು ಯಾಕೆ ನಟಿಸಿರಲಿಲ್ಲ’ ಅಂತಿದೀರಾ??…ಕಾರಣವಿಲ್ಲಿದೆ ಓದಿ. ಚಿತ್ರರಂಗ ಕಂಡ ಅದ್ಬುತ ಸಿನಿಮಾಗಳಲ್ಲೊಂದಾದ ಕಾಂತಾರವು ಕನ್ನಡಿಗರ ಗರಿಮೆಯನ್ನು ಮುಗಿಲೆತ್ತರಕ್ಕೆ ಏರಿಸಿದೆ. ಎಲ್ಲಾ ಭಾಷೆಗಳಲ್ಲಿಯೂ ಭರ್ಜರಿ ಪ್ರದರ್ಶನ ಕಂಡ ಈ ಚಿತ್ರವು, 170 ಕೋಟಿಗಳಷ್ಟು ಕಲೆಕ್ಷನ್ ಮಾಡಿ ಎಷ್ಟೋ ಹಿಟ್ ಚಿತ್ರಗಳ ದಾಖಲೆಗಳನ್ನು ಮುರಿಯುತ್ತಾ, ಮುನ್ನುಗ್ಗುತ್ತಲೇ ಇದೆ. ಚಿತ್ರತಂಡವೂ ಊಹೆ ಮಾಡಿರದ ಸಕ್ಸಸ್ ಇದರದ್ದಾಗಿದೆ.

ಕಾಂತಾರದ ನಿರ್ದೇಶಕರಾದ ರಿಷಬ್ ಶೆಟ್ಟಿ ಅವರು ಚಿತ್ರದಲ್ಲಿ ನಾಯಕನಾಗಿ ನಟಿಸುವ ಯಾವುದೇ ಯೋಚನೆಯನ್ನು ಹೊಂದಿರಲಿಲ್ಲವಂತೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಲ್ಲಿ ಚಿತ್ರದ ನಾಯಕನ ಪಾತ್ರಕ್ಕೆ ನಟಿಸುವಂತೆ ಕೇಳಿದ್ದರಂತೆ. ಇದಕ್ಕೆ ಪುನೀತ್ ರಾಜಕುಮಾರ್ ಅವರ ಸಮ್ಮತಿ ಕೂಡ ದೊರಕಿತ್ತಂತೆ. ‘ಕಥೆಯು ಬಹಳ ಇಷ್ಟವಾಯಿತು’ ಎಂದಿದ್ದರಂತೆ.

ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಪುನೀತ್ ರಾಜಕುಮಾರ್ ಅವರು ಜೇಮ್ಸ್, ಗಂಧದಗುಡಿ ಚಿತ್ರಗಳಲ್ಲಿ ನಟಿಸುತ್ತಿದ್ದರಂತೆ. ಅದೇ ಕಾರಣಗಳಿಂದ ಪುನೀತ್ ರಾಜಕುಮಾರ್ ಅವರು ರಿಷಬ್ ಶೆಟ್ಟಿ ಅವರ ಬಳಿ ಬಂದು ‘ಇಂತಹ ಒಂದು ಸುಂದರ ಕಥೆಯುಳ್ಳ ಚಿತ್ರಕ್ಕೆ ನೀವು ಕೂಡ ನಾಯಕನಾಗಿ ನಟಿಸಿದರೆ, ಪರದೆಯ ಮೇಲೆ ಚೆನ್ನಾಗಿ ಮೂಡಿಬಂದು, ಚಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇದೆ’ ಎಂದು ಹೇಳಿದ್ದರಂತೆ. ಪುನೀತ್ ರಾಜಕುಮಾರ್ ಅವರು ಕಾಂತಾರ ಚಿತ್ರದಲ್ಲಿ ನಟಿಸದಿದ್ದರು, ಆಗಾಗ ರಿಷಬ್ ಅವರಿಗೆ ಕರೆ ಮಾಡಿ, ‘ಚಿತ್ರೀಕರಣ ಹೇಗೆ ನಡೆಯುತ್ತಿದೆ?’ ಎಂದು ಕೇಳುತ್ತಿದ್ದರಂತೆ. ‘ಚಿತ್ರದಲ್ಲಿ ಪುನೀತ್ ಅವರು ಭರವಸೆಯನ್ನಿಟ್ಟುಕೊಂಡಿದ್ದರು; ಅದು ಇಂದಿಗೆ ನಿಜವಾಗಿದೆ’ ಎಂದು ರಿಷಬ್ ಅವರು ಮಾಧ್ಯಮಗಳ ಎದುರಲ್ಲಿ ಹೇಳಿದ್ದಾರೆ.

Leave a Comment

error: Content is protected !!