ಅಪ್ಪು ನೆನಪಿನಲ್ಲಿ ತೆಲುಗು ನಟ ರಾಣಾ ಮಾಡಿದ ಕೆಲಸವೇನು ಗೊತ್ತಾ???

ಕನ್ನಡ ಚಿತ್ರರಂಗದ ಖ್ಯಾತಿಯ ನಟ ಪುನೀತ್ ರಾಜಕುಮಾರ್ ಅವರು, ಪ್ರೇಮದ ಕಾಣಿಕೆಯಾಗಿ ದೊರೆತು ಸಿನಿ ಪರದೆಯ ಮೇಲೆ ಕಾಣಿಸಿಕೊಂಡು ಜನಮನಗಳಲ್ಲಿ ಅಚ್ಚಾಗಿ ಉಳಿದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ವಸಂತ ಗೀತಾ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಇಂತಹ ಚಿತ್ರದಲ್ಲಿ ನಟಿಸಿ ಅಭಿನಯದಲ್ಲಿ ಸೈ ಎನಿಸಿಕೊಂಡವರು. ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಆಗಿ ‘ನ್ಯಾಷನಲ್ ಫಿಲ್ಮ್ ಅವಾರ್ಡ್’, ‘ಕರ್ನಾಟಕ ಸ್ಟೇಟ್ ಫಿಲ್ಮ ಅವಾರ್ಡ್’ಗಳನ್ನು ಅತಿ ಚಿಕ್ಕ ವಯಸ್ಸಿನಲ್ಲಿ ಗಳಿಸಿದ ಹೆಗ್ಗಳಿಕೆ ಇವರದು.

2002ರಲ್ಲಿ ಅಪ್ಪು ಚಿತ್ರದಲ್ಲಿ ನಟಿಸಿ ಇಂದಿಗೂ ಅವರು ಅಪ್ಪು ಎಂದೇ ಫೇಮಸ್ ಆಗಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ಚಿತ್ರರಂಗದ ನಟ ನಟಿಯರು, ತೆರೆಯ ಹಿಂದಿನ ಕೆಲಸಗಾರರು ಸೇರಿದಂತೆ ಹಲವಾರು ಭಾಷೆಯ ಕಲಾವಿದರು ಇವರ ಅಭಿಮಾನಿಗಳೇ. ಊಹಿಸಲಾರದ ಇವರ ಸಾವು ಎಲ್ಲರನ್ನೂ ದುಃಖಿತರನ್ನಾಗಿಸಿದೆ. ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಇವರ ಸಾಧನೆ ಅಪಾರ. ಅಭಿನಯ, ಹಾಡು, ನೃತ್ಯಗಳ ಮೂಲಕ ಮನರಂಜಿಸಿ ಗಳಿಸಿದ ಕೋಟಿ ಕೋಟಿ ಅಭಿಮಾನಿಗಳೊಂದಡೆಯಾದರೆ; ಸ್ನೇಹ, ನಗು, ಸರಳತೆ, ಉತ್ಸಾಹ, ಮಧುರ ಮಾತು, ಸಹೋದ್ಯೋಗಿಗಳೊಂದಿಗಿನ ಒಡನಾಟ ಇಂತಹ ನಡತೆಗೆ ಮಣಿದು ಬಂದವರು ಎಣಿಕೆ ಮೀರಿದ್ದಾರೆ.

ಜನಮನದಲ್ಲಿ ಸದಾ ಜೀವಂತವಿರುವ ಇವರನ್ನು ನೆನೆಯದೇ ಇತ್ತೀಚೆಗೆ ಯಾವ ಕಾರ್ಯಕ್ರಮಗಳು ಮೂಡಿ ಬರುತ್ತಿಲ್ಲ. ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿನ ನಟ ನಟಿಯರು, ಸಹಕಲಾವಿದರುಗಳು ಕಾರ್ಯಕ್ರಮಗಳಲ್ಲಿ ಇವರನ್ನು ನೆನೆದು ಭಾವುಕರಾಗುವುದನ್ನು ನೋಡಿದ್ದೇವೆ. ವೇದಿಕೆಯಲ್ಲಿ ‘ವಿ ಮಿಸ್ ಯು ಅಪ್ಪು’ ಎಂಬ ಮಾತುಗಳನ್ನು ಹಲವಾರು ಬಾರಿ ಕೇಳಿದ್ದೇವೆ. ಇವರ ಸ್ಮರಣಾರ್ಥವಾಗಿ ಇವರ ಮೇಲಿನ ಅಭಿಮಾನ ಪ್ರೀತಿಯನ್ನು ತೆಲುಗು ನಟರೊಬ್ಬರು ಪ್ರತಿಬಿಂಬಿಸಿದ್ದಾರೆ.

ಅಪ್ಪು ಅವರ ಹೃದಯವಂತಿಕೆಗೆ ಮನಸೋಲದವರು ಯಾರು ಇಲ್ಲ. ಟಾಲಿವುಡ್ ನ ಹಿರೋ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಅವರು ತಮ್ಮ ಕಚೇರಿಯಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ತಳಿಕೆಯನ್ನು ಇರಿಸಿಕೊಂಡಿದ್ದಾರೆ. ಎಲ್ಲರಿಗೂ ಮಾದರಿಯಾಗುವಂತಹ ನಡವಳಿಕೆ ಅಪ್ಪು ಅವರಿಗಿತ್ತು. ಎಲ್ಲರನ್ನೂ ಸಮಾನ ಪ್ರೀತಿ, ಗೌರವದಿಂದ ಕಾಣುವ ಮನೋಭಾವವನ್ನು ಹೊಂದಿದ್ದ ಅಪ್ಪು ಅವರ ಪುತ್ತಳಿಕೆಯನ್ನು ಇರಿಸಿಕೊಂಡ ರಾಣಾ ದಗ್ಗುಬಾಟಿ ಅವರು ಹೆಮ್ಮೆಯಿಂದ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿ ‘ನನ್ನ ಕಚೇರಿಗೆ ಸುಂದರವಾದ ವಿಶಾಲ ಮನಸ್ಸಿನ ವ್ಯಕ್ತಿಯ ಸ್ಮರಣಿಕೆ ಬಂದು ತಲುಪಿದೆ’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ‘ಮಿಸ್ ಯು ಫ್ರೆಂಡ್’ ಎಂದೂ ಹಾಕಿದ್ದಾರೆ. ಕಲಾವಿದರು ಹೆಮ್ಮೆಯಿಂದ ವ್ಯಕ್ತಪಡಿಸುವ ಅಪ್ಪು ಅವರ ಮೇಲಿನ ಪ್ರೀತಿ ಕಂಡು ಅಭಿಮಾನಿಗಳು ಮತ್ತೊಮ್ಮೆ ಭಾವಕರಾಗಿದ್ದಾರಂತೆ.

Leave a Comment

error: Content is protected !!